Saturday, May 5, 2012

ನಾ ಬರೆಯುವಾಗ .......




ಕುಂದಿತೇಕೆ ಛಲವೆನ್ನ ಎದೆಯಾಳದಿಂದ
ಹಸಿದ ಹಂಬಲ ಉಕ್ಕಿ ಹರಿದು ಹೋಯಿತೇ
ಯಶಸ್ಸಿನ ಏಣಿ ಕಾಲ ಬುಡದಲಿರುವಾಗ
ಭಾವುಕತೆ ಏಕೆ? ನಿರಾಳ ಮನ ಮುದುಡಿತೇಕೆ.!

ಒಂದರಂತಿಲ್ಲ ಮತ್ತೊಂದು ಕೈ ಬೆರಳು
ಮುಷ್ಟಿಯಲೇ ಸಾಧಿಪ ಸಂಪತ್ತು ಇಹುದು
ಇಂದಿನಂತಿಲ್ಲ ನಾಳೆಯ ದಿನ ಕ್ಷಣಗಳು
ನಂಬಿಕೆಯೇ ನಾಳೆಯ ಯಶಸ್ಸಿನ ನೆರಳು.!

ಅಂತರಾಳದಿ ಇಹುದಲ್ಲ ಜ್ನಾನ ಪುಸ್ತಕ
ಮಸ್ತಕಕೆ ಏಕೆ ಛಲದ ಮತ್ತು ಹತ್ತೇರುತಿಲ್ಲ
ದೇಹವೇ ದೇಗುಲ ಅಂಗಾಗಗಳೇ ದೈವ
ಮತ್ತೇಕೆ ಗುರಿಯ ಸೇರಲು ಹೊತ್ತಾಗುತಿಲ್ಲ.!

ಬೆಳಕಿಹುದು ಅಂತರಂಗದಿ ಕತ್ತಲ ಸುತ್ತಲು
ಹೊರ ಜಗವ ಬೆಳಗಲೇಕೆ ಬೆಳಕು ಸಾಲುತಿಲ್ಲ
ಹಣೆಬರಹ ವಿಧಿ ನಿಯಮಗಳೆಂಬ ಜಗಕೆ
ಆಸೆ ಜೊತೆ ನಿರುತ್ಸಾಹದ ಸಮ್ಮಂದ ಹೋಲುತಿಲ್ಲ.!

ಭೂಮಿ ಕಡಲು ಬೆಳಕು ಗಾಳಿ ಸುತ್ತಲೆಲ್ಲ
ಖಾಲಿ ಹಾಳೆಯಲಿ ಮಿಂಚುವ ಕವನವಾಯಿತೀಗ
ಮೌನ ಮನದ ದಂಡೆಯಲಿ ಕುಳಿತು
ಬದುಕ ಸಿಹಿ ಕಹಿ ಭಾವನೆಗಳನು ಬರೆಯುವಾಗ.!